Ad
GREEN VALLEY INTERNATIONAL SCHOOL
ರಾಜ್ಯ

ಅವೈಜ್ಞಾನಿಕ ಬರ ಸಮೀಕ್ಷೆ ಕೈಬಿಟ್ಟು ವೈಜ್ಞಾನಿಕ ಸಮೀಕ್ಷೆ ಜಾರಿಗೊಳಿಸಿ: ಆಮ್ ಆದ್ಮಿ ಪಾರ್ಟಿ ಆಗ್ರಹ

ವಿಜಯಪುರ ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ – ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ವಿಜಯಪುರ: ಮುಂಗಾರು ಮಳೆಯ ಕೊರತೆ ಹಾಗೂ ಅಸಮರ್ಪಕ ಮಳೆಯಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ನಷ್ಟ, ನೀರಿನ ಕೊರತೆ ಮತ್ತು ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವೈಜ್ಞಾನಿಕ ಬರ ಸಮೀಕ್ಷೆಯನ್ನು ಕೈಬಿಟ್ಟು, ಎಲ್ಲಾ ತಾಲೂಕುಗಳಲ್ಲಿ ವೈಜ್ಞಾನಿಕ ಹಾಗೂ ಪಾರದರ್ಶಕ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು ಮತ್ತು ವಿಜಯಪುರ ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.

ನಮಸ್ತೆ ಕರ್ನಾಟಕ ಡೆಸ್ಕ್
6 ನಿಮಿಷಗಳ ಹಿಂದೆ · 4 views
ವಿಜಯಪುರ ಸೇಪ್ 03: ವಿಜಯಪುರ ಜಿಲ್ಲೆಯ ರೈತರು ಮುಂಗಾರು ಮಳೆಯ ಕೊರತೆ ಹಾಗೂ ಅಸಮರ್ಪಕ ಮಳೆಯಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ. ಆಮ್ ಆದ್ಮಿ ಪಾರ್ಟಿಯ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಅವರ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಮಳೆಯ ಕೊರತೆಯಿಂದಾಗಿ ಜಿಲ್ಲೆಯ ಹಲವು ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಬೆಳೆ ನಷ್ಟ, ಕುಡಿಯುವ ನೀರಿನ ಕೊರತೆ, ಜಾನುವಾರುಗಳಿಗೆ ಮೇವು ಹಾಗೂ ನೀರಿನ ಸಮಸ್ಯೆ ಸೇರಿದಂತೆ ಗ್ರಾಮೀಣ ಜನಜೀವನದ ಮೇಲೆ ಬರದ ಪರಿಣಾಮ ತೀವ್ರವಾಗುತ್ತಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಆದರೆ ರಾಜ್ಯ ಸರ್ಕಾರವು ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ ವಿಜಯಪುರ, ನಿಡಗುಂದಿ ಹಾಗೂ ಕೊಲ್ಹಾರ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದು ಉಳಿದ ತಾಲೂಕುಗಳ ರೈತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. “ಉಳಿದ 10 ತಾಲೂಕುಗಳ ರೈತರೇನು? ಅವರ ಬೆಳೆ ನಷ್ಟವೇನು? ಅವರ ಸಂಕಷ್ಟಕ್ಕೆ ಪರಿಹಾರ ಯಾವಾಗ?” ಎಂದು ಪಕ್ಷ ಪ್ರಶ್ನಿಸಿದೆ. ಬರಕ್ಕೆ ತಾಲೂಕು ಗಡಿ ಗೊತ್ತಿಲ್ಲ, ಮಳೆಯ ಕೊರತೆಗೆ ತಾಲೂಕು ಗಡಿ ಗೊತ್ತಿಲ್ಲ ಹಾಗೂ ರೈತರ ಸಂಕಷ್ಟಕ್ಕೂ ತಾಲೂಕು ಗಡಿ ಗೊತ್ತಿಲ್ಲ. ಹೀಗಿರುವಾಗ ಕೇವಲ ಮೂರು ತಾಲೂಕುಗಳನ್ನು ಮಾತ್ರ ಬರಪೀಡಿತವೆಂದು ಪರಿಗಣಿಸಿ, ಉಳಿದ 10 ತಾಲೂಕುಗಳ ರೈತರನ್ನು ಪರಿಹಾರದಿಂದ ವಂಚಿಸುವುದು ಅನ್ಯಾಯ ಎಂದು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಪ್ರಮುಖ ಆಗ್ರಹಗಳು 1 ವಿಜಯಪುರ ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ತಕ್ಷಣ ಬರಪೀಡಿತ ಎಂದು ಘೋಷಿಸಬೇಕು. 2 ಎಲ್ಲಾ ತಾಲೂಕುಗಳಲ್ಲಿ ವೈಜ್ಞಾನಿಕ, ನಿಷ್ಪಕ್ಷಪಾತ ಹಾಗೂ ಪಾರದರ್ಶಕ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು. 3 ಅರ್ಹ ಪ್ರತಿಯೊಬ್ಬ ರೈತನಿಗೂ ತಕ್ಷಣ ಬೆಳೆ ಪರಿಹಾರ ನೀಡಬೇಕು. 4 ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು. 5 ರೈತರ ಸಾಲ ವಸೂಲಾತಿ ಹಾಗೂ ಬಡ್ಡಿಯಲ್ಲಿ ಸೂಕ್ತ ರಿಯಾಯಿತಿ ನೀಡಬೇಕು. 6 ಬರ ಘೋಷಣೆಯ ಮಾನದಂಡಗಳು ಹಾಗೂ ತಾಲೂಕುವಾರು ಬೆಳೆ ಹಾನಿ ಸಮೀಕ್ಷೆಯ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. “ರೈತರ ಪರಿಹಾರ ಸರ್ಕಾರದ ದಯೆಯಲ್ಲ; ಅದು ರೈತರ ಹಕ್ಕು” ಎಂದು ಆಮ್ ಆದ್ಮಿ ಪಾರ್ಟಿ ಸ್ಪಷ್ಟಪಡಿಸಿದೆ. ವಿಜಯಪುರ ಜಿಲ್ಲೆಯ 13 ತಾಲೂಕುಗಳ ರೈತರೂ ಸಮಾನರು. ಅವರಿಗೆ ಸಮಾನ ನ್ಯಾಯ, ಸಮಾನ ಪರಿಹಾರ ಹಾಗೂ ಸಮಾನ ಗೌರವ ದೊರೆಯಬೇಕು. ಜಿಲ್ಲೆಯ ರೈತರಿಗೆ ಅನ್ಯಾಯವಾದರೆ ಆಮ್ ಆದ್ಮಿ ಪಾರ್ಟಿ ಮೌನವಾಗಿರುವುದಿಲ್ಲ. ರೈತರ ಹಕ್ಕಿಗಾಗಿ ಹಾಗೂ ವಿಜಯಪುರ ಜಿಲ್ಲೆಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪಕ್ಷದ ಹೋರಾಟ ನಿರಂತರವಾಗಿರಲಿದೆ ಎಂದು ಮುಖಂಡರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಮಹಿಳಾ ಮುಖಂಡರಾದ ಸುಶೀಲಾ ಮಿಣಜಗಿ, ನೀಲಂಬಿಕಾ ಬಿರಾದಾರ, ಜ್ಯೋತಿ ಮಿಣಜಗಿ, ಯುವ ಮುಖಂಡರಾದ ಕಿರಣ್ ಮೇಲಿನಕೇರಿ, ಫರೀದ್ ನದಾಫ್ ಹಾಗೂ ಸಾಗರ ನಾಟಿಕರ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Ad
ಸಂಪಾದಕರು

ಕಾಮೆಂಟ್‌ಗಳು (0)

ಕಾಮೆಂಟ್ ಮಾಡಲು ಲಾಗಿನ್ ಮಾಡಿ.

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!